ಮಕ್ಕಳಲ್ಲಿನ ಕ್ರೀಯಾತ್ಮಕ ಕಲ್ಪನೆ ಸಾಕಾರಗೊಳಿಸುವ ಐಡಿಯಾಥಾನ್

ಮಕ್ಕಳಲ್ಲಿನ ಕ್ರೀಯಾತ್ಮಕ ಕಲ್ಪನೆ ಸಾಕಾರಗೊಳಿಸುವ ಐಡಿಯಾಥಾನ್

ಶಿವಮೊಗ್ಗ: ಇಂದಿನ ಮಕ್ಕಳು ಹಾಗೂ ಯುವಜನರಿಂದ ಭವಿಷ್ಯದ ಕ್ರೀಯಾತ್ಮಕ ಜಗತ್ತು ಸೃಷ್ಟಿ ಮಾಡಲು ಸಾಧ್ಯವಿದ್ದು, ಯುವಜನತೆ ಕಲ್ಪನೆಯ ಕನಸುಗಳನ್ನು ಕಾರ್ಯರೂಪಕ್ಕೆ ತರಬೇಕಿದೆ ಎಂದು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್ ಹೇಳಿದರು.

ಶಿವಮೊಗ್ಗ ನಗರ ಸಮೀಪವಿರುವ ಜಾವಳ್ಳಿಯ ಓಪನ್ ಮೈಂಡ್ ವರ್ಲ್ಡ್ ಸ್ಕೂಲ್‌ನಲ್ಲಿ ಡಯಟ್ ಶಿವಮೊಗ್ಗ, ಓಪನ್ ಮೈಂಡ್ಸ್ ವರ್ಲ್ಡ್ ಸ್ಕೂಲ್ ಮತ್ತು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ಐಡಿಯಾಥಾನ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಲೆನಾಡಿನ ಶೈಕ್ಷಣಿಕ, ಮನೋರಂಜನೆ, ಅಪರಾಧ, ಅಪಘಾತ ಮತ್ತು ರಾಜಕೀಯದ ಕ್ಷಣ ಕ್ಷಣದ ಸುದ್ದಿ ಮಾಹಿತಿಗಾಗಿ ಶಿವಮೊಗ್ಗ ಎಕ್ಸ್ ಪ್ರೆಸ್ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಲು ಈ ಕೆಳಗಿನ ಫೋಟೋ ಮೇಲೆ ಕ್ಲಿಕ್ ಮಾಡಿ

ವಿದ್ಯುತ್, ಮೊಬೈಲ್, ವಾಹನ ಹೀಗೆ ಪ್ರತಿಯೊಂದು ವಿಷಯವು ಯಾವುದೋ ಒಬ್ಬ ವ್ಯಕ್ತಿಯ ಕಲ್ಪನೆಗಳೇ ಆಗಿದ್ದು, ಇಂದಿನ ಯುವ ಮಕ್ಕಳಲ್ಲಿ ಇರುವ ವಿಶೇಷ ಆಲೋಚನೆಗಳ ಬಗ್ಗೆ ಸಮಾಲೋಚಿಸಿ ಭವಿಷ್ಯದಲ್ಲಿ ಕನಸು ಸಾಕಾರಗೊಳ್ಳಬೇಕು. ಐಡಿಯಾಥಾನ್ ಸ್ಪರ್ಧೆಯು ಯುವ ಮಕ್ಕಳಿಗೆ ಉತ್ತಮ ವೇದಿಕೆ ಎಂದು ತಿಳಿಸಿದರು.

ಡಯಟ್ ಪ್ರಾಚಾರ್ಯ ಬಿ.ಆರ್.ಬಸವರಾಜಪ್ಪ ಮಾತನಾಡಿ, ರಾಜ್ಯದಲ್ಲಿಯೇ ಮೊದಲ ಬಾರಿ ಐಡಿಯಾಥಾನ್ ಎನ್ನುವ ವಿಶೇಷ ಪ್ರಯತ್ನ ನಡೆಯುತ್ತಿದ್ದು, ನಗರ ಸೇರಿದಂತೆ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿರುವುದು ಅತ್ಯಂತ ಅಭಿನಂದನೀಯ. ಎಲ್ಲರ ಆಲೋಚನೆಗಳನ್ನು ಒಟ್ಟುಗೂಡಿಸಿ ಮುಂದಿನ ಭವಿಷ್ಯದಲ್ಲಿ ಹೊಸ ಅನ್ವೇಷಣೆ ನಡೆಯುವಂತೆ ಆಗಬೇಕು ಎಂದು ಸಲಹೆ ನೀಡಿದರು.

ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹ ಕಾರ್ಯದರ್ಶಿ ಜಿ.ವಿಜಯಕುಮಾರ್ ಮಾತನಾಡಿ, ಆಧುನಿಕ ಯುಗದಲ್ಲಿ ತಂತ್ರಜ್ಞಾನ ಹಾಗೂ ಕೌಶಲ್ಯ ಅತ್ಯಂತ ಉಪಯುಕ್ತ ಆಗಿದ್ದು, ಯುವಜನರು ಹೊಸ ಹೊಸ ಅನ್ವೇಷಣೆಗಳನ್ನು ತಂತ್ರಜ್ಞಾನದ ಮುಖಾಂತರ ಮಾಡಬೇಕು. ಎಲ್ಲ ರೀತಿಯ ಸೌಕರ್ಯಗಳು ಯುವಸಮೂಹಕ್ಕೆ ಲಭ್ಯವಿದೆ ಎಂದು ಹೇಳಿದರು.

ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘವು ಯುವಜನರಲ್ಲಿ ಕೌಶಲ್ಯದ ಮಹತ್ವ ಅರಿವು ಮೂಡಿಸುವ ದಿಸೆಯಲ್ಲಿ ಹಾಗೂ ತರಬೇತಿಗಳನ್ನು ನೀಡುವ ಆಶಯದಿಂದ ಸ್ಕಿಲ್ ಅಕಾಡೆಮಿ ಸ್ಥಾಪಿಸುತ್ತಿದೆ. ಯುವಜನರು ಶಿಕ್ಷಣದ ಜತೆಯಲ್ಲಿ ಕೌಶಲ್ಯಕ್ಕೂ ವಿಶೇಷ ಪ್ರಾಮುಖ್ಯತೆ ನೀಡಬೇಕು ಎಂದು ತಿಳಿಸಿದರು.

ಅಡ್ವಾನ್ಸ್ ಸ್ಕಿಲ್ ಅಕಾಡೆಮಿ ಸಿಇಒ ಸವಿತಾ ಮಾಧವ, ಓಪನ್ ಮೈಂಡ್ಸ್ ಶಾಲೆಯ ಮ್ಯಾನೇಜಿಂಗ್ ಟ್ರಸ್ಟಿ ಕಿರಣ್ ಕುಮಾರ್ ಕೆ, ಡಾ. ಹರಿಪ್ರಸಾದ್, ವೆಂಕಟೇಶ್, ಸುಬ್ರಹ್ಮಣ್ಯ, ನವೀನ್ ಮತ್ತಿತರರು ಉಪಸ್ಥಿತರಿದ್ದರು.


Leave a Reply

Your email address will not be published.