ಫ್ರೀಡಂ ಪಾರ್ಕ್ಗೆ ʼಅಲ್ಲಮಪ್ರಭುʼ ಹೆಸರಿಡಬೇಕು; ಬೇಡಿಕೆಯಿಟ್ಟ ಮಧು ಬಂಗಾರಪ್ಪ
ಶಿವಮೊಗ್ಗ : ಈ ನಾಡಿನಲ್ಲಿ ಹುಟ್ಟಿದ ವಚನಕಾರ ಅಲ್ಲಮಪ್ರಭು ಅವರ ಹೆಸರನ್ನು ಶಿವಮೊಗ್ಗದ ಫ್ರೀಡಂ ಪಾರ್ಕ್ಗೆ ಇಡಬೇಕು ಎಂದು ಶಿವಮೊಗ್ಗದ ಜಿಲ್ಲಾ ಉಸ್ತುವಾರಿ ಮಧು ಬಂಗಾರಪ್ಪ ಅವರು ಸಿಎಂ ಸಿದ್ದರಾಮಯ್ಯ ಅವರಲ್ಲಿ ಬೇಡಿಕೆ ಇಟ್ಟಿದ್ದಾರೆ.
ಶಿವಮೊಗ್ಗದ ಫ್ರೀಡಂ ಪಾರ್ಕ್ನಲ್ಲಿ ಇಂದು ನಡೆದ ಯುವನಿಧಿ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಮಧು ಬಂಗಾರಪ್ಪ, ಇಂದು ಶಿವಮೊಗ್ಗದಲ್ಲಿ ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಒಂದು ದೊಡ್ಡ ಇತಿಹಾಸ ಸೃಷ್ಟಿಯಾಗುತ್ತಿದೆ
ಇದೀಗ ಕಾಂಗ್ರೆಸ್ನ 5ನೇ ಗ್ಯಾರಂಟಿ ಜಾರಿಗೆ ಬರುತ್ತಿದೆ. ಇಂದು ರಾಜ್ಯಾದ್ಯಂತ ಮಹಿಳೆಯರು ಸರ್ಕಾರಿ ಬಸ್ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಕಾಂಗ್ರೆಸ್ ಸರ್ಕಾರವೇ ಕಾರಣ ಎಂದು ನುಡಿದರು.
ಈ ಸಂದರ್ಭದಲ್ಲಿ ಸಿಎಂ ಅವರಲ್ಲಿ ಮಧು ಬಂಗಾರಪ್ಪ 2 ಬೇಡಿಕೆಗಳನ್ನಿಟ್ಟಿದ್ದಾರೆ. ಸಾಕಷ್ಟು ಹೋರಾಟಗಾರರು, ಸಾಧು ಸಂತರು ಹುಟ್ಟಿದ ಊರು ಈ ಶಿವಮೊಗ್ಗ. ಖ್ಯಾತ ವಚನಕಾರ ಅಲ್ಲಮಪ್ರಭು ಅವರ ಹುಟ್ಟು ಕೂಡಾ ಇಲ್ಲಿನ ಶಿಕಾರಿಪುರದ ಬೆಳ್ಳಿಗಾವಿಯಲ್ಲಿ ಆಗಿದೆ. ಅವರು ತಮ್ಮ ವಚನಗಳ ಮೂಲಕ ಜನತೆಗೆ ಸಾಕಷ್ಟು ಮಾರ್ಗದರ್ಶನವನ್ನು ನೀಡಿದ್ದಾರೆ. ಅವರ ಹೆಸರನ್ನು ಫ್ರೀಡಂ ಪಾರ್ಕ್ಗೆ ಇಡುವ ಮೂಲಕ ಗೌರವ ನೀಡಬೇಕು ಎಂದು ಅವರು ಮನವಿ ಮಾಡಿದರು.
ಅದೇ ರೀತಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಪಕ್ಷದ ಕಾರ್ಯಕರ್ತರಿಗೆ 2 ಕಣ್ಣಿದ್ದಂತೆ. ಕಳೆದ ವರ್ಷ ಚುನಾವನೆಗೂ ಮುನ್ನ ಮಲೆನಾಡ ಜನಾಕ್ರೋಶ ನಡೆದಿತ್ತು. ಆ ಹೋರಾಟದಲ್ಲಿ ಅವರು ಭಾಗಿಯಾಗಿ ನಮಗೆ ಶಕ್ತಿ ನೀಡಿದ್ದರು. ಇದೀಗ ಈ ಭಾಗದಲ್ಲಿ ಸಂಕಷ್ಟದಲ್ಲಿರುವ ರೈತರಿಗೆ ಹಕ್ಕುಪತ್ರವನ್ನು ವಿತರಿಸುವ ಜವಾಬ್ದಾರಿಯನ್ನು ಅವರು ತೆಗೆದುಕೊಳ್ಳಬೇಕು ಎಂದು ಮಧು ಬಂಗಾರಪ್ಪ ಮನವಿ ಮಾಡಿದರು.
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply