ಶಿವಮೊಗ್ಗದಲ್ಲಿ ಮೋದಿ ಮತಬೇಟೆ ! ಬೃಹತ್ ಸಮಾವೇಶ ! ಕಾಂಗ್ರೆಸ್- ಇಂಡಿಯಾ ಒಕ್ಕೂಟಕ್ಕೆ ಮೋದಿ ತಿರುಗೇಟು !
ಶಿವಮೊಗ್ಗದಲ್ಲಿ ಆಯೋಜಿಸಿದ್ದ ಬಿಜೆಪಿ ಕಾರ್ಯಕರ್ತರ ಸಮಾವೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ತೆರೆದ ವಾಹನದಲ್ಲಿ ಅದ್ದೂರಿಯಾಗಿ ಎಂಟ್ರಿಕೊಟ್ಟಿದ್ದು, ಮೋದಿ ಆಗಮಿಸುತ್ತಿದ್ದಂತೆ ಲಕ್ಷಾಂತರ ಮಂದಿ ಎದ್ದು ನಿಂತು ಮೋದಿಗೆ ಜೈಕಾರ ಹಾಕಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯ ತೆರೆದ ವಾಹನದಲ್ಲಿ ಶಿವಮೊಗ್ಗ ಲೋಕಸಭಾ ಅಭ್ಯರ್ಥಿ ಬಿವೈ ರಾಘವೇಂದ್ರ, ದಾವಣಗೆರೆ ಲೋಕಸಭಾ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಜೊತೆಗೆ ತೆರೆದ ವಾಹನದಲ್ಲಿ ವೇದಿಕೆಗೆ ಆಗಮಿಸಿದರು. ಈ ವೇಳೆ ಕಾರ್ಯಕರ್ತರ ಜಯ ಘೋಷ, ಮೋದಿ ಮೋದಿ ಘೋಷಣೆ, ಬಾರತ್ ಮಾತಾ ಕಿ ಜೈಕಾರದಿಂದ ಸಭೆ ಝೇಂಕರಿಸಿತ್ತು.
ಶಿವಮೊಗ್ಗ ಜನತೆಗೆ ನಮಸ್ಕಾರ ಎಂದು ಕನ್ನಡದಲ್ಲಿ ಭಾಷಣ ಆರಂಭಿಸಿದ ಪ್ರಧಾನಿ ಮೋದಿ , ಕೆಲ ವರ್ಷಗಳ ಹಿಂದೆ ಶಿವಮೊಗ್ಗ ಜನತೆಗೆ ನಾವು ಯಾರು ಎಂದೇ ಗೊತ್ತಿರಲಿಲ್ಲ ಆದರೆ ಅಂತಹ ಸಮಯದಲ್ಲಿ ಬಿ ಎಸ್ ಯಡಿಯೂರಪ್ಪ ತಮ್ಮ ಜೀವನವನ್ನು ಸವೆಸಿ ಪಕ್ಷಕ್ಕೆ ಭದ್ರ ಬುನಾದಿ ಹಾಕಿದ್ದಾರೆ, ಇದು ಅವರ ತಪೋಭೂಮಿ ಎಂದು ಬಿಎಸ್ವೈ ಅವರನ್ನು ಮೋದಿ ಹಾಡಿ ಹೊಗಳಿದ್ದಾರೆ.
ಕರ್ನಾಟಕವನ್ನು ಕಾಂಗ್ರೆಸ್ ಎಟಿಎಂ ಮಾಡಿಕೊಂಡಿದೆ, ಲೂಟಿ ಭ್ರಷ್ಟಾರ ಎಷ್ಟರ ಮಟ್ಟಿಗೆ ಹೆಚ್ಚಾಗಿದೆ ಎಂದರೆ ಸರ್ಕಾರ ನಡೆಸಲೂ ಹಣವಿಲ್ಲ. ಇಲ್ಲಿ ದೆಹಲಿಯ ಕಲೆಕ್ಷನ್ ಮಿನಿಸ್ಟರ್, ಸೂಪರ್ ಸಿಎಂ , ಶ್ಯಾಡೋ ಸಿಎಂ, ಭಾವಿ ಸಿಎಂ ಎಲ್ಲಾ ಇದ್ದಾರೆ. ಕರ್ನಾಟಕದ ಜನರಿಗೆ ಕಾಂಗ್ರೆಸ್ ಸರ್ಕಾರ ದೊಡ್ಡ ವಂಚನೆ ಮಾಡಿದೆ. ಕರ್ನಾಟಕದ ಅಭಿವೃದ್ಧಿಗೆ ಎಲ್ಲಾ 28 ಸೀಟುಗಳಲ್ಲಿ ಎನ್ಡಿಎ ಅಭ್ಯರ್ಥಿಗಳು ಗೆಲ್ಲಬೇಕು, ಕೇಂದ್ರದ ಯೋಜನೆಗಳನ್ನು ಸರಿಯಾಗಿ ಜಾರಿಗೆ ತರುವಲ್ಲಿ ಅವರು ಕೆಲಸ ಮಾಡುತ್ತಾರೆ ಎಂದರು.
ಶಕ್ತಿಯನ್ನು ನಾಶ ಮಾಡುವುದು ಅವರ ಉದ್ದೇಶವಾದರೆ, ಶಕ್ತಿಯನ್ನು ನಾವು ಪೂಜೆ ಮಾಡುತ್ತೇವೆ.ನಾನು ಜನರ ಸೇವೆ ಮಾಡುವ ಸಂಕಲ್ಪ ಮಾಡಿದಾಗ ಇದೇ ‘ಶಕ್ತಿ’ ನನಗೆ ಚೈತನ್ಯ ನೀಡಿದೆ. ಭಾರತದ ಪ್ರತಿಯೊಬ್ಬರೂ ಶಕ್ತಿಯ ಆರಾಧಕರೇ, ಶಿವಾಜಿ ಪಾರ್ಕ್ನಲ್ಲಿ ಶಕ್ತಿಯ ವಿನಾಶದ ಘೊಷಣೆ ಕೂಗುತ್ತಿರುವಾಗ ಬಾಳ ಠಾಕ್ರೆಯ ಆತ್ಮ ಎಷ್ಟು ನೊಂದಿರಬೇಡ? ಅಲ್ಲಿ ಪ್ರತಿ ಮಗುವೂ ಜೈ ಭವಾನಿ, ಜೈ ಶಿವಾಜಿ ಘೊಷಣೆ ಕೂಗುತ್ತಾ ಬೆಳೆಯುತ್ತಾರೆ. ಅಂತಹ ಸ್ಥಳದಲ್ಲಿ ‘ಶಕ್ತಿ’ ವಿನಾಶದ ಮಾತನ್ನಾಡಿದ್ದಾರೆ ಇದು ಖಂಡನೀಯ ಎಂದು ಮೋದಿ ಹೇಳಿದರು.
ಯಾ ದೇವಿ ಸರ್ವ ಭೂತೇಷು, ಶಕ್ತಿ ರೂಪೇಣ ಸಂಸ್ಥಿತಾ, ನಮಸ್ತಸೈ ನಮೋನಮಃ…… ಎಂದ ಪ್ರಧಾನಿ ಕುವೆಂಪು ಕೂಡ ‘ಮಂತ್ರ ಕಣಾ..ಶಕ್ತಿ ಕಣಾ…ದೇವಿ ಕಣಾ…ಎಂದು ಕರ್ನಾಟಕ ಮಾತೆಯನ್ನು ಶಕ್ತಿಯ ರೂಪದಲ್ಲಿ ಕಂಡಿದ್ದರು. ಆದೆ ಇಂಡಿಯಾ ಮೈತ್ರಿ ಕೂಟ ಈ ಶಕ್ತಿಯನ್ನು ನಾಶಪಡಿಸಲು ಹೊರಟಿದೆ, ಇವರಿಗೆ ಭಾರತೀಯ ನಾರಿಯ ಕಲ್ಯಾಣ ಇಷ್ಟವಿಲ್ಲ, ಭಾರತೀಯ ಮಹಿಳೆಯರ ಸಶಕ್ತಿಕರಣ ತಡೆಯಲು ಸಾಧ್ಯವಾಗುತ್ತಿಲ್ಲ ಎಂದು ಕಿಡಿಕಾರಿದರು.
ಇಂಗ್ಲೀಷರು ಹೋದರು ಆದರೆ ಕಾಂಗ್ರೆಸ್ ಇಂಗ್ಲೀಷರ ಮನಸ್ಥಿತಿಯಲ್ಲಿದೆ, ಒಡೆದು ಆಳುವ ನೀತಿಯನ್ನು ಮುಂದುವರೆಸುತ್ತಿದೆ, ಕರ್ನಾಟಕ ಕಾಂಗ್ರೆಸ್ನ ಸಂಸದ ಕೂಡ ಈಗ ದೇಶ ಒಡೆಯುವ ಮಾತನ್ನಾಡಿದ್ದಾರೆ. ಇಂತಹ ಸಂಸದನನ್ನ ಇನ್ನೂ ಪಕ್ಷದಲ್ಲಿ ಉಳಿಸಿಕೊಂಡಿದೆ ಎಂದು ಡಿ ಕೆ ಸುರೇಶ್ ವಿರುದ್ಧ ಪ್ರಧಾನಿ ಹರಿಹಾಯ್ದರು.
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply