ಲಂಬಾಣಿ ಉಡುಗೆ ತೊಟ್ಟು ತಾಂಡಾಗಳಲ್ಲಿ ಗೀತಾ ಶಿವರಾಜಕುಮಾರ್ ಭರ್ಜರಿ ಮತ ಬೇಟೆ !
ಶಿವಮೊಗ್ಗ : ತಾಲೂಕಿನ ಸವಳಂಗ ರಸ್ತೆಯ ಕುಂಚೆನಹಳ್ಳಿ ತಾಂಡದಲ್ಲಿ ಲಂಬಾಣಿ ಉಡುಗೆ ತೊಟ್ಟು ಗೀತಾ ಶಿವರಾಜ್ ಕುಮಾರ್ ಬಂಜಾರ ಸಮುದಾಯದೊಂದಿಗೆ ಲಂಬಾಣಿ ಸಂಸ್ಕೃತಿಯಂತೆ ಯುಗಾದಿ ( ಆಟಮ್ ) ಹಬ್ಬವನ್ನ ಆಚರಿಸಿ ಭರ್ಜರಿ ಮತ ಬೇಟೆ ನಡೆಸಿದ್ದಾರೆ.
ಕುಂಚೇನಹಳ್ಳಿಯ ಸೇವಾಲಾಲ್ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಅವರು, ತೆರೆದ ವಾಹನದಲ್ಲಿ ವೇದಿಕೆ ಬಳಿಗೆ ಸಾಗಿದರು. ಬಂಜಾರ ಸಮುದಾಯದ ಮಹಿಳೆಯರು ತಾಂಡಕ್ಕೆ ಆಗಮಿಸಿದ ಶಿವರಾಜ್ ಕುಮಾರ್ ಮತ್ತು ಗೀತಾ ಶಿವರಾಜಕುಮಾರ್ ಅವರನ್ನು ಲಂಬಾಣಿ ಸಂಸ್ಕೃತಿಯಂತೆ ಆರತಿ ಬೆಳಗಿ ಪ್ರೀತಿಯಿಂದ ಬರಮಾಡಿಕೊಂಡರು.
ಕುಂಚೇನಹಳ್ಳಿ ತಾಂಡಾದಲ್ಲಿ ಮಂಗಳವಾರ ಆಯೋಜಿಸಿದ್ದ ‘ನಮ್ಮೂರ ಹುಡುಗ ಡಾ.ಶಿವರಾಜಕುಮಾರ್ ಹಾಗೂ ಗೀತಾ ಶಿವರಾಜಕುಮಾರ್ ಅವರು ಬಂಜಾರ ಸಮುದಾಯದೊಂದಿಗೆ ಶೀರ್ಷಿಕೆಯಡಿಯ ಯುಗಾದಿ ಹಬ್ಬ ಆಚರಣೆಯಲ್ಲಿ ಪಾಲ್ಗೊಂಡರು ಈ ವೇಳೆಮಾತನಾಡಿದ ಅವರು ಕಾಂಗ್ರೆಸ್ ಸರ್ಕಾರದ ಮೂಲ ಉದ್ದೇಶ ಬಡತನ ನಿರ್ಮೂಲನೆ ಹಾಗೂ ಬಡ ಕುಟುಂಬಗಳ ಹಸಿವು ನೀಗಿಸುವುದು. ಅದೇ, ಉದ್ದೇಶದಿಂದ ಲೋಕಸಭಾ ಚುನಾವಣೆ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಜನ ಸಾಮಾನ್ಯರಿಗೆ ಪೂರಕವಾದ ಯೋಜನೆಗಳನ್ನು ಘೋಷಿಸಲಾಗಿದೆ ಎಂದರು
ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾತನಾಡಿ ಬಿಜೆಪಿ ಪಕ್ಷದವರು ದೇವರನ್ನು ಬೀದಿಗೆ ತಂದು ಮತ ಕೇಳುತ್ತಿದ್ದಾರೆ. ಇದು ರಾಜಕೀಯದಲ್ಲಿ ಸಲ್ಲದು. ನಾವೂ ಕೂಡ ದೇವರ ಭಕ್ತರೆ. ಇಲ್ಲಿ ನ್ಯಾಯ, ನೀತಿ, ಸತ್ಯ, ಧರ್ಮ ಮಾತ್ರ ಗೆಲ್ಲಬೇಕು. ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳಿಂದ ಬಡವರ ಹಸಿವು ನೀಗಿಸಲಾಗುತ್ತಿದೆ. ಇಲ್ಲಿ ಕಷ್ಟಕ್ಕೆ ಸ್ಪಂದಿಸಿದವರಿಗೆ ಮತ ಚಲಾಯಿಸಬೇಕು ಎಂದರು. ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರಿಗೆ ಕುಂಚೇಹಳ್ಳಿಯಲ್ಲಿ ಅಭಿಮಾನಿ ಬಳಗ ಹೆಚ್ಚು. ನನಗೆ ಹಾಗೂ ಗೀತಕ್ಕಗೆ ಈಗ ತಂದೆ ಇಲ್ಲ. ಆದ್ದರಿಂದ ನೀವೇ ನಮ್ಮ ತಂದೆ-ತಾಯಿ. ಇಂದಿನಿಂದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಅವರನ್ನು ನಿಮ್ಮ ಮಡಿಲಿಗೆ ಹಾಕಿದ್ದೇನೆ. ಬಂಗಾರಪ್ಪ ಅವರಿಗೆ ನೀಡಿದ್ದ ಪ್ರೋತ್ಸಾಹ ಗೀತಾ ಶಿವರಾಜಕುಮಾರ್ ಅವರಿಗೂ ನೀಡಿ ಎಂದು ಕೋರಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾ ಘಟಕ ಅಧ್ಯಕ್ಷ ಆರ್.ಪ್ರಸನ್ನ ಕುಮಾರ್, ಎಚ್.ಸಿ.ಯೋಗೀಶ್, ಅನಿತಾ ಕುಮಾರಿ, ಎಂ.ಶ್ರೀಕಾಂತ್, ಎನ್.ರಮೇಶ್, ರವಿಕುಮಾರ್, ಕಲಗೋಡು ರತ್ನಾಕರ್, ಎಸ್.ಕೆ.ಮರಿಯಣ್ಣ, ಜಗದೀಶ್ ಸೇರಿ ಬಂಜಾರದ ಸಮುದಾಯದ ಮುಖಂಡರು ಇದ್ದರು.
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply